ಶಿವಮೊಗ್ಗ: ಕರೋನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ದಂಪತಿ ತಮ್ಮೂರಿಗೆ ನೂರಾರು ಕಿಲೋಮೀಟರ್ ಕಾಲ್ನಡಿಗೆಯಲ್ಲೇ ತೆರಳುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ದಂಪತಿ ತಿರುಪತಿ ಹಾಗೂ ಚಂದವ್ವ ಕೆಲಸಕ್ಕೆಂದು ಕೊಪ್ಪಳ ಜಿಲ್ಲೆಯಿಂದ ಕಾರ್ಕಳಕ್ಕೆ ತೆರಳಿದ್ದರು. ಅಲ್ಲಿ ಒಂದು ವಾರ ಕೆಲಸವನ್ನೂ ಮಾಡಿದ್ದರು. ಆದರೆ ಕರೋನಾ ಭೀತಿ ಹಿನ್ನೆಲೆಯಲ್ಲಿ ಇಡೀ ಭಾರತವನ್ನೇ ಲಾಕ್ ಡೌನ್ ಮಾಡಲಾಯಿತು. ಆದರೆ ಈ ದಂಪತಿ ಮತ್ತೆ ಕೆಲಸ ಆರಂಭಗೊಳ್ಳಬಹುದೇನೋ ಎಂಬ ನಿರೀಕ್ಷೆಯಲ್ಲಿ ಅಲ್ಲೇ ಒಂದು ವಾರ ಕಳೆದಿದ್ದಾರೆ. ಅಷ್ಟರಲ್ಲಾಗಲೇ ಅವರು ದುಡಿದ ಹಣವೆಲ್ಲಾ ಖಾಲಿಯಾಗಿದೆ. ಆಗ ಆ ದಂಪತಿ ಊರಿಗೆ ಹೋಗಲು ತೀರ್ಮಾನಿಸಿದ್ದಾರೆ. ಅಷ್ಟರಲ್ಲಾಗಲೇ ಬಸ್ ಸಂಚಾರ ಬಂದ್ ಆಗಿದ್ದರಿಂದ ನಡೆದುಕೊಂಡೇ ಕಾರ್ಕಳದಿಂದ ದೂರದ ಕೊಪ್ಪಳಕ್ಕೆ ಹೊರಟಿದ್ದಾರೆ. ಕಳೆದ ಐದು ದಿನಗಳ ಹಿಂದೆ ಕಾರ್ಕಳದಿಂದ ನಡೆದುಕೊಂಡು ಹೊರಟಿದ್ದಾರೆ. ಐದು ದಿನಗಳಲ್ಲಿ ಈ ದಂಪತಿ ಮಾರ್ಗಮಧ್ಯದ ಹಳ್ಳಿಗರು ನೀಡಿದ ತಿಂಡಿ ಊಟ ಸೇವಿಸಿ ದೇವಸ್ಥಾನ ಹಾಗೂ ಶಾಲೆಗಳಲ್ಲಿ ಉಳಿದು ತಮ್ಮ ಪ್ರಯಾಣ ಮುಂದುವರಿಸಿದ್ದಾರೆ. ಪ್ರಸ್ತುತ ಈ ದಂಪತಿ ಶಿವಮೊಗ್ಗ ತಲುಪಿದ್ದು, ತಮ್ಮ ಊರನ್ನು ತಲುಪಲು ಇನ್ನೂ 200 ಕಿಲೋಮೀಟರ್ ಕ್ರಮಿಸಬೇಕಾಗಿದೆ. ಶಿವಮೊಗ್ಗಕ್ಕೆ ಆಗಮಿಸಿದ ಈ ದಂಪತಿಗೆ ಶಿವಮೊಗ್ಗದ ವಿವಿಧ ಸಂಘಟನೆಗಳು, ನೀರು, ಬಿಸ್ಕತ್ ಹಾಗೂ ಸ್ವಲ್ಪ ಹಣವನ್ನೂ ನೀಡಿ ಕಳುಹಿಸಿಕೊಟ್ಟಿವೆ.
C News TV Kannada News Online in cnewstv