Breaking News

ಪಿಎಸ್‍ಐ ಪರೀಕ್ಷಾ ನೇಮಕ ಹಗರಣ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಯಾಗಬೇಕು : ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ಓ. ಶಿವಕುಮಾರ್

Cnewstv.in / 04.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಪಿಎಸ್‍ಐ ಪರೀಕ್ಷಾ ನೇಮಕ ಹಗರಣ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಯಾಗಬೇಕು : ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ಓ. ಶಿವಕುಮಾರ್

ಶಿವಮೊಗ್ಗ: ಪಿಎಸ್‍ಐ ನೇಮಕದಲ್ಲಿ ನಡೆದಿರುವ ಭಾರೀ ಭ್ರಷ್ಟಾಚಾರವನ್ನು ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ಓ. ಶಿವಕುಮಾರ್ ಒತ್ತಾಯಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರ ಬಂದ ಮೇಲೆ ಭ್ರಷ್ಟಾಚಾರ ಎಲ್ಲ ರಂಗಗಳಲ್ಲಿಯೂ ಹಬ್ಬಿದೆ. ಅದರಲ್ಲೂ ಸರ್ಕಾರಿ ಹುದ್ದೆಗಳನ್ನು ನೇಮಕ ಮಾಡಿಕೊಳ್ಳುವಾಗ ಅಕ್ರಮ ಮತ್ತಷ್ಟು ಹೆಚ್ಚಾಗಿದೆ. ಎಲ್ಲ ನೇಮಕಾತಿಗಳಲ್ಲೂ ಭ್ರಷ್ಟಾಚಾರ ಮಿತಿಮೀರಿದೆ. ಪಿಎಸ್‍ಐ ನೇಮಕಾತಿಗೆ ಸಂಬಂಧಿಸಿದಂತೆ ಈ ಅಕ್ರಮ ಹೊರಬಿದ್ದಿದ್ದು, ಸರ್ಕಾರ ತನಿಖೆಯನ್ನು ದಿಕ್ಕುತಪ್ಪಿಸುವ ಹಂತದಲ್ಲಿದೆ. ಸಿಓಡಿಯ ಬಗ್ಗೆ ನಮಗೆ ವಿಶ್ವಾಸವಿದೆ ನಿಜ. ಆದರೆ, ರಾಜಕಾರಣಿಗಳ ಕಪಿಮುಷ್ಠಿಗೆ ಸಿಕ್ಕು ತನಿಖೆ ಕೂಡ ಹಾದಿತಪ್ಪಲಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಂಗ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಪ್ರಶ್ನೆಪತ್ರಿಕೆ, ಓಎಂಆರ್ ಶೀಟ್‍ಗಳ ಮೌಲ್ಯಮಾಪನ, ಪರೀಕ್ಷಾ ಕೇಂದ್ರಗಳು, ಪರೀಕ್ಷಾ ಕೇಂದ್ರದಲ್ಲಿದ್ದ ಮೇಲ್ವಿಚಾರಕರು, ಪ್ರಶ್ನೆ ಪತ್ರಿಕೆಗಳ ಸಾಗಣೆ ಮಾಡಿದವರು, ಹೀಗೆ ಎಲ್ಲ ಕೋನಗಳಲ್ಲಿಯೂ ತನಿಖೆ ಆಗಬೇಕಾಗಿದೆ. ಈಗಾಗಲೇ ಹಲವರು ನೇಮಕಾತಿಗಾಗಿ ಹಣ ಕೊಟ್ಟಿರುವ ಬಗ್ಗೆ ಒಪ್ಪಿಕೊಂಡಿದ್ದರೂ ಕೂಡ ಅವರನ್ನು ಠಾಣೆಗೆ ಕರೆಯಿಸಿ ವಾಪಾಸು ಬಿಟ್ಟಿದ್ದಾರೆ. ಸುಮಾರು 40 ಕೋಟಿಗೂ ಹೆಚ್ಚು ಮೊತ್ತದ ಹಗರಣ ಪಿಎಸ್‍ಐ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎಂದು ದೂರಿದರು.

ಪಿಎಸ್‍ಐ ನೇಮಕಾತಿಯ ಭ್ರಷ್ಟಾಚಾರ ಪ್ರಸಕ್ತ ವರ್ಷದಲ್ಲಿ ಮಾತ್ರವಲ್ಲ, 2019 ಮತ್ತು 2020ರಲ್ಲಿಯೂ ಕೂಡ ನಡೆದಿದೆ. ಆದರೆ, ಅದು ಬೆಳಕಿಗೆ ಬಂದಿರಲಿಲ್ಲ. ಈ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ತಾವು ಮಾಹಿತಿಯನ್ನ ಸಂಗ್ರಹಿಸುತ್ತಿದ್ದೇನೆ. ಈ ನೇಮಕಾತಿಯ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಶಿವಮೊಗ್ಗದ ಪ್ರಸಿದ್ಧ ರಾಜಕಾರಣಿಯ ಪಾತ್ರವೂ ಇದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಬಹಿರಂಗಪಡಿಸುವೆ ಎಂದರು.

ಕಾಟಾಚಾರದ ತನಿಖೆಯನ್ನ ಕೈಬಿಡಬೇಕು. ಇದರಿಂದ ಪ್ರತಿಭಾವಂತರಿಗೆ ತೊಂದರೆಯಾಗುತ್ತದೆ. ಕೆಲವರು ಮಾಡುವ ತಪ್ಪಿಗೆ ಹಲವರು ಶಿಕ್ಷೆ ಪಡುವಂತಾಗುತ್ತದೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿರುವ ಇಂತಹ ಹೊತ್ತಿನಲ್ಲಿ ಪಾರದರ್ಶಕವಾಗಿ ನಡೆಯಬೇಕಾಗಿದ್ದ ನೇಮಕಾತಿಗಳು ಈ ರೀತಿಯ ಭ್ರಷ್ಟಾಚಾರಕ್ಕೆ ತುತ್ತಾದರೆ ಜನರು ಹೇಗೆ ನಂಬುತ್ತಾರೆ ಎಂದರು.

ನಾನು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವೆ. ಸಂಘಟನೆಯ ಮೂಲಕ ಪಕ್ಷವನ್ನು ಬಲಪಡಿಸಿ ಚುನಾವಣೆಗೆ ತಯಾರಿ ನಡೆಸುತ್ತಿದ್ದೇವೆ. ತಮಗೆ ಟಿಕೆಟ್ ನೀಡುವುದು ಬಿಡುವುದು ಪಕ್ಷದ ಹೈಕಮಾಂಡ್‍ಗೆ ಬಿಟ್ಟದ್ದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಿವೃತ್ತ ಡಿಎಸ್‍ಪಿ ಮಂಜಪ್ಪ, ನಿವೃತ್ತ ವೃತ್ತ ನಿರೀಕ್ಷಕ ಗಣೇಶ್, ನಿವೃತ್ತ ಡಿಡಿಪಿಐ ಎನ್.ಎಸ್. ಕುಮಾರ್ ಇದ್ದರು.

ಇದನ್ನು ಒದಿ‌ : https://cnewstv.in/?p=9678

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*