Breaking News

ಕ್ಯಾನ್ಸರ್ ಆಸ್ಪತ್ರೆಗೆ ಶೀಘ್ರದಲ್ಲೇ ಶಿಲಾನ್ಯಾಸ : ಡಾ.ಕೆ.ಸುಧಾಕರ್.

Cnewstv.in / 02.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಕ್ಯಾನ್ಸರ್ ಆಸ್ಪತ್ರೆಗೆ ಶೀಘ್ರದಲ್ಲೇ ಶಿಲಾನ್ಯಾಸ : ಡಾ.ಕೆ.ಸುಧಾಕರ್.

ಶಿವಮೊಗ್ಗ : ಶಿವಮೊಗ್ಗಕ್ಕೆ ಕ್ಯಾನ್ಸರ್ ಆಸ್ಪತ್ರೆ ಮಂಜೂರಾಗಿದ್ದು, ಸದ್ಯದಲ್ಲೇ ಶಿಲಾನ್ಯಾಸ ಆಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಹೇಳಿದರು.

ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮುಂಭಾಗದ ಆವರಣದಲ್ಲಿ ಇಂದು ಏರ್ಪಡಿಸಲಾಗಿದ್ದ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೋವಿಡ್ ಸಮಯದಲ್ಲಿ ಎಲ್ಲ ಮೆಡಿಕಲ್ ಕಾಲೇಜುಗಳಲ್ಲಿ ನರ್ಸಿಂಗ್ ಕಾಲೇಜು ತೆರೆಯಬೇಕೆಂಬ ನೂತನ ನೀತಿ ರೂಪಿಸಲಾದನ್ವಯ ಶಿವಮೊಗ್ಗದಲ್ಲಿ ಇಂದು ಕಾಲೇಜು ಉದ್ಘಾಟನೆಗೊಂಡು 100 ನರ್ಸಿಂಗ್ ವಿದ್ಯಾರ್ಥಿಗಳ ದಾಖಲಾತಿಗೆ ಕೇಂದ್ರದಿಂದ ಅನುಮೋದನೆ ದೊರೆತಿದೆ.

ಅನೇಕ ಸಮಸ್ಯೆಗಳಿಗೆ ಉಪಯುಕ್ತವಾದ 128 ಸ್ಲೈಸ್ ಸಿಟಿ ಯಂತ್ರ ಉದ್ಘಾಟನೆಗೊಂಡಿದೆ. ಕೋವಿಡ್ 2ನೇ ಅಲೆಯಲ್ಲಿ ಆಮ್ಲಜನಕ ಕೊರತೆ ಅತೀವವಾಗಿ ಕಾಡಿದ್ದು, ಅಂತಹ ಸಂದರ್ಭದಲ್ಲಿ ನಿಕಟಪೂರ್ವ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಎಲ್ಲ ಮೆಡಿಕಲ್ ಕಾಲೇಜುಗಳಲ್ಲಿ ಆಮ್ಲಜನಕ ಸ್ಟೋರೇಜ್ ಟ್ಯಾಂಕ್ಸ್‍ನ್ನು ದ್ವಿಗುಣಗೊಳಿಸಲಾಗಿದ್ದು, ರಾಜ್ಯದಲ್ಲಿ 30 ಸಾವಿರಕ್ಕೂ ಹೆಚ್ಚು ಹಾಸಿಗೆಗಳಿಗೆ ಆಕ್ಸಿಜನ್ ಅಳವಡಿಕೆ ಆಗಿರುವುದು ಒಂದು ದಾಖಲೆ ಆಗಿದೆ. ಲಿಕ್ವಿಡ್ ಆಕ್ಸಿಜನ್ ಫಿಲ್ಲಿಂಗ್ ಸ್ಟೇಷನ್ ಶಿವಮೊಗ್ಗದ ವಿಶೇಷ. ಶಿವಮೊಗ್ಗದ ಸಂಸ್ಥೆಗೆ 130 ಐಸಿಯು ಬೆಡ್, 108 ಹೆಚ್‍ಡಿಡಿ ಮತ್ತು 120 ವೆಂಟಿಲೇಟರ್ ನೀಡಲಾಗಿದೆ. ಎನ್‍ಐಸಿಯು ಘಟಕ, ಸ್ಕಿಲ್ ಲ್ಯಾಲ್ ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳ ಅಭಿವೃದ್ದಿಯಾಗುತ್ತಿದ್ದು ಈ ಎಲ್ಲ ಕಾರ್ಯಕ್ರಮಗಳ ಹಿಂದೆ ಬದ್ದತೆಯುಳ್ಳ ನಾಯಕರಿದ್ದಾರೆಂದರು.

50 ಕೋಟಿ ಜನರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಮೂಲಕ ಉಚಿತವಾಗಿ ಆರೋಗ್ಯ ವಿಮೆ ನೀಡಿದ ಏಕೈಕ ದೇಶ ನಮ್ಮದು. ಪ್ರಾಥಮಿಕ ಮತ್ತು ದ್ವಿತೀಯ ಹಂತದ ಚಿಕಿತ್ಸೆಗಳು ಇತರೆ ಆಸ್ಪತ್ರೆಗಳಲ್ಲಿ ದೊರೆತರೆ ತೃತೀಯ ಹಂತದ ಚಿಕಿತ್ಸೆ ವೈದ್ಯಕೀಯ ಕಾಲೇಜುಗಳಿರುವೆಡೆ ಲಭಿಸುತ್ತದೆ. ಗುಣಮಟ್ಟದ ಸೇವೆ ನೀಡದಿದ್ದಲ್ಲಿ ಜನರು ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ. ಹಾಗಾಗದಂತೆ ನೋಡಿಕೊಳ್ಳಬೇಕು ಎಂದರು.

ಇದನ್ನು ಒದಿ‌ : https://cnewstv.in/?p=9656

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*