ಶಿವಮೊಗ್ಗ : ರಾಜ್ಯ ಸರ್ಕಾರ ನೆರೆ ಸಂತ್ರಸ್ಥರಿಗೆ ಪರಿಹಾರ ನೀಡುವಲ್ಲಿಯೂ ತಾರತಮ್ಯ ಮಾಡುತ್ತಿದೆ ಎಂದು ಕಾಂಗ್ರೆಸ್ ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ದೂರಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗೋಷ್ಡಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ನೆರೆ ಪರಿಸ್ಥಿತಿ ಉಂಟಾಗಿ ಕೆಲ ತಿಂಗಳು ಕಳೆದಿವೆ. ನೆರೆಯಿಂದಾಗಿ ಹಲವು ಕುಟುಂಬಗಳು ಮನೆ, ಮಠ ಕಳೆದುಕೊಂಡು ಬೀದಿ ಪಾಲಾಗಿದ್ದರು. ಸಂತ್ರಸ್ಥರಿಗೆ ಪರಿಹಾರ ಘೋಷಣೆ ಮಾಡಿದ್ದ ರಾಜ್ಯ ಸರ್ಕಾರ, ಈವರೆಗೂ ಸಂತ್ರಸ್ತರಿಗೆ ಸವಲತ್ತು ಕೊಟ್ಟಿಲ್ಲ. ಕೆಲವರಿಗೆ 10, 25, 35 ಸಾವಿರ ಕೊಟ್ಟಿದ್ದಾರೆ. ಸ್ವಪಕ್ಷೀಯರಿಗೆ 35 ಸಾವಿರ ಕೊಟ್ಟಿದ್ದು, ಅವರ ಪಕ್ಷದ ಕಾರ್ಯಕರ್ತರ ಮನೆ ಚೆನ್ನಾಗಿದ್ದರು ಹಣ ನೀಡಿದ್ದಾರೆ ಎಂದು ಆರೋಪಿಸಿದರು. ಇನ್ನೂ ಶಿವಮೊಗ್ಗ ನಗರ ಕ್ಷೇತ್ರದಿಂದ ಕೆ.ಎಸ್.ಈಶ್ವರಪ್ಪನವರು ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಗ್ರಾಮೀಣಾಭಿವೃದ್ದೀ ಸಚಿವರಾಗಿರುವ ಈಶ್ವರಪ್ಪನವರ ಮನೆಯ ಪಕ್ಕದಲ್ಲಿಯೇ ಇರುವ ರಾಜೀವ್ ಗಾಂಧಿ ಬಡಾವಣೆ, ಅಂಗಳಯ್ಯನ ಕೇರಿಯಲ್ಲಿಯೇ ನೆರೆಯಿಂದ ಸಾಕಷ್ಟು ಹಾನಿಯಾಗಿತ್ತು. ಒಮ್ಮೆಯೂ ಕೂಡ ಅಲ್ಲಿಗೆ ಸಚಿವರು ಭೇಟಿ ನೀಡಿಲ್ಲ. ನಿಜವಾಗಿಯೂ ಮನೆ ಬಿದ್ದವರ ಪರಿಸ್ಥಿತಿ ಇಂದಿಗೂ ಹಾಗೆಯೇ ಇದೆ. ಹೆಣ್ಮಕ್ಕಳು ಸಣ್ಣ ಪ್ಲಾಸ್ಟಿಕ್ ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಶೌಚಾಲಯ, ಕೂರಲು ಸರಿಯಾದ ಜಾಗ ಸಹ ಇಲ್ಲದೇ ಪರದಾಡುತ್ತಿದ್ದಾರೆ. ಆದರೇ ಇದನ್ನು ಕೇಳಬೇಕಾದ ರಾಜ್ಯ ಸರ್ಕಾರ ಹಾಗೂ ಸಚಿವರುಗಳು ರಾಜಕಾರಣ ಮಾಡುತ್ತಿದ್ದಾರೆ. ರಾಜಕಾರಣ ಬಿಟ್ಟು ಕೂಡಲೇ ಸಂತ್ರಸ್ಥರಿಗೆ ಸಮರ್ಪಕ ಪರಿಹಾರ ನೀಡಲು ರಾಜ್ಯ ಸರ್ಕಾರ ಪರಿಹಾರ ನೀಡಬೇಕು ಎಂದು ಹೆಚ್.ಎಸ್.ಸುಂದರೇಶ್ ಒತ್ತಾಯಿಸಿದರು.
C News TV Kannada News Online in cnewstv