ಶಿವಮೊಗ್ಗದಲ್ಲಿಉಪ ಚುನಾವಣೆಯ ರಂಗು ಕಾವೇರುತ್ತಿದೆ. ಈ ಬಾರಿಯ ಉಪ ಚುನಾವಣೆ ಪತ್ರಿಷ್ಠೆಯಾಗಿ ಎದುರಾಗಿದೆ. ಅದರಲ್ಲಿಯೂ ಪ್ರಮುಖವಾಗಿ ಮೂರು ಮಾಜಿ ಮುಖ್ಯಮಂತ್ರಿಗಳ ಪುತ್ರರ ನಡುವೆ ಹಣಾಹಣಿ ಜೋರಾಗಿದೆ. ಬಿಜೆಪಿ ಪಕ್ಷದಿಂದ ಬಿಎಸ್ ಯಡಿಯೂರಪ್ಪನವರ ಪುತ್ರ ಬಿ.ವೈ.ರಾಘವೇಂದ್ರ, ಕಾಂಗ್ರೆಸ್ ಮತ್ತು ಜೆಡಿಎಸ್ನ ಸಮ್ಮಿಶ್ರ ಅಭ್ಯರ್ಥಿಯಾಗಿ ಬಂಗಾರಪ್ಪನವರ ಪುತ್ರ ಮಧು ಬಂಗಾರಪ್ಪ ಜೆಡಿಯುನಿಂದ ಜೆ.ಎಚ್.ಪಟೇಲರ ಪುತ್ರ ಮಹಿಮಾ ಪಟೇಲ್ ಸ್ಪರ್ಧಿಸುತ್ತಿದ್ದಾರೆ. ಎಲ್ಲ ಪಕ್ಷದ ನಾಯಕರುಗಳು ತಮ್ಮ ಪಕ್ಷದ ಅಭ್ಯರ್ಥಿಯ ಪರ ಬಿರುಸಿನ ಪ್ರಚಾರವನ್ನು ಮಾಡುತ್ತಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸದಲ್ಲಿದ್ದಾರೆ. ಶಿವಮೊಗ್ಗ ಜಿಲ್ಲೆ ಬಿಜೆಪಿಯ ಭದ್ರಕೋಟೆ ಎಂದು ಯಡಿಯೂರಪ್ಪನವರು ಲೋಕಸಭೆ ಉಪಚುನಾವಣೆ ಘೋಷಣೆಯಾಗುವ ಮುನ್ನವೇ ತಮ್ಮ ಪುತ್ರ ಬಿ.ವೈ.ರಾಘವೇಂದ್ರರವರು ಬಿಜೆಪಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರು. ಆದರೆ ಈ ಭದ್ರಕೋಟೆಯನ್ನು ಬೇಧಿಸಬೇಕು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಧು ಬಂಗಾರಪ್ಪನವರನ್ನು ಕಣಕ್ಕಿಳಿಸಿದ್ದಾರೆ. ಇದರಿಂದಾಗಿ ಬಿಜೆಪಿಯ ಗೆಲುವಿನ ತಂತ್ರಗಾರಿಕೆಯಲ್ಲಿ ಬದಲಾವಣೆಗಳಾಗಿದೆ ಎಂದರೆ ತಪ್ಪಿಲ್ಲ. ಪ್ರಚಾರದ ಭರಾಟೆಯಲ್ಲಿ ನಾಯಕರು ಒಬ್ಬರ ಮೇಲೆ ಮತ್ತೊಬ್ಬರು ಅರೋಪ ಪ್ರತ್ಯಾರೋಪ ಮಾಡುತ್ತಿರುವುದು ಸಾಮಾನ್ಯವಾಗಿದೆ. ಮತ್ತೊಂದು ಕಡೆ ಇಷ್ಟು ದಿನ ಅಸ್ತಿತ್ವದಲ್ಲಿ ಇಲ್ಲದ ಜೆ.ಡಿ.ಯು. ಈ ಉಪ ಚುನಾವಣೆಯಲ್ಲಿ ತಮ್ಮ ಅಸ್ದಿತ್ವವನ್ನು ಬಯಸುತ್ತಿದೆ..
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲಿ ಕಾರ್ಯಕರ್ತರಿಗಿಂತ ಲೀಡರ್ಗಳೆ ಹೆಚ್ಚಿದ್ದಂತಿದೆ. ಬರುವ ಸ್ಟಾರ್ ಕ್ಯಾಂಪೇನ್ಗಳ ಜೊತೆ ಸೆಕೆಂಡ್ ರೌಂಡ್ ಲೀಡರ್ಗಳು ಮತ್ತು ಉಳಿದ ನಾಯಕರುಗಳು ಸುತ್ತಾಟ ಮಾಡುತ್ತಲೇ ಇದ್ದಾರೆ . ಮತದಾರರ ಬಳಿ ಮತ ಕೇಳಲು, ಡೋರ್ ಟು ಡೋರ್ ಪ್ರಚಾರ ಮಾಡುವ ಕಾರ್ಯಕರ್ತರು ಕಾಣುತ್ತಿಲ್ಲ. ಇನ್ನುಳಿದ ಮೂರು ದಿನಕ್ಕಾದರೂ ಲೀಡರ್ಗಳ ಅಗತ್ಯಕ್ಕಿಂತ ಕಾರ್ಯಕರ್ತರ ಅಗತ್ಯ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಈ ಸಾಮಾನ್ಯ ಜ್ಞಾನ ಇವೆರೆಡು ಪಕ್ಷದವರಿಗೆ ಬರುವ ಮೊದಲೆ ಚುನಾವಣ ಫಲಿತಾಂಶವೇ ಬರಬಹುದು, ಅದರೆ ಬಿ.ಜೆ.ಪಿ ಪಕ್ಷದಲ್ಲಿ ಹಿರಿಯ ನಾಯಕರ ಜೊತೆ ಬೂತ್ ಮಟ್ಟದಲ್ಲಿ ಕೂಡ ಕಾಯಕತರು ತಮ್ಮ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಇದರಿಂದ ಪಕ್ಷವು ಮೇಲ್ಮಟ್ಟದಲ್ಲಿ ಮಾತ್ರವಲ್ಲದೇ ಅತ್ಯಂತ ಕೆಳಮಟ್ಟದಲ್ಲೂ ಸಹ ಪ್ರಚಾರ ಮಾಡುತ್ತಿರುವುದು ಬಿ.ಜೆ.ಪಿ ಗೆಲುವಿಗೆ ಸಹಾಯವಾಗಲಿದೆ.
ಜಿಲ್ಲೆಯಲ್ಲಿ ಒಟ್ಟು ೨,೭೫,೦೦೦ ಲಿಂಗಾಯತರು, ೨,೫೦,೦೦೦ ದಲಿತ, ೨,೦೦,೦೦೦ ಈಡಿಗರು, ೧,೫೦,೦೦೦ ಬ್ರಾಹ್ಮಣರು, ೧,೩೦,೦೦೦ ಮುಸ್ಲಿಂ, ೬೧,೦೦೦ ಕುರುಬ ಮತದಾರರಿದ್ದಾರೆ. ಬಿಜೆಪಿಯವರೇ ಹೇಳುವ ಹಾಗೆ ಹಿಂದುತ್ವದ ಆಧಾರದ ಮೇಲೆ ನೋಡಿದರೆ ಲಿಂಗಾಯತರ ಹಾಗೂ ಬ್ರಾಹ್ಮಣರ ಮತಗಳು ಬಿಜೆಪಿಗೆ ಸಿಗಲಿದೆ ಎನ್ನಬಹುದು. ಆದರೆ ಜಿಲ್ಲೆಯಲ್ಲಿರುವ ಈಡಿಗ ಮತದಾರರು ಯಡಿಯೂರಪ್ಪನವರಿಗೆ ಮತವನ್ನು ಚಲಾಯಿಸುತ್ತಾರೆ ಅಥವಾ ಬಂಗಾರಪ್ಪನವರ ಅಭಿಮಾನದ ಮೇಲೆ ಮಧು ಬಂಗಾರಪ್ಪನವರಿಗೆ ಮತ ಚಲಾಯಿಸುತ್ತಾರೆ ಎಂಬ ದ್ವಂದ್ವವು ಇದೆ. ಮಹಿಮಾ ಪಟೇಲ್ ಲಿಂಗಾಯತ ಸಮುದಾಯಕ್ಕೆ ಸೇರುವುದರಿಂದ ಅಲ್ಲಿಯೂ ಸಹ ಮತಗಳು ಕವಲೊಡೆಯೋ ಸಾಧ್ಯತೆಗಳಿದೆ..
ಒಟ್ಟಿನಲ್ಲಿ ಜನ ಈ ಬಾರಿ ಯಾರ ಕೈ ಹಿಡಿಯಲಿದ್ದಾರೆ, ಕೈ ಬಿಡಲಿದ್ದಾರೆ ಎಂಬುದು ಚುನಾವಣೆ ನಂತರ ೬ ರಂದು ತಿಳಿಯಲಿದೆ..
Recent Comments