ನಗರದಲ್ಲಿ ವೃದ್ಧರು, ಮಹಿಳೆಯರ ನಿದ್ದೆಗೆಡಿಸಿರುವ ಸರಗಳ್ಳರು ಈಗ ರೈಲು ನಿಲ್ದಾಣದ ಸಮೀಪ ಕ್ರಾಸಿಂಗ್ಗಾಗಿ, ರೆಡ್ ಸಿಗ್ನಲ್ನಲ್ಲಿ ನಿಲ್ಲುವ ರೈಲುಗಳಲ್ಲೂ ತಮ್ಮ ಕೈಚಳಕ ಆರಂಭಿಸಿದ್ದು, ಮಹಿಳಾ ಪ್ರಯಾಣಿಕರು ಆತಂಕಗೊಂಡಿದ್ದಾರೆ
ಬೆಂಗಳೂರು: ನಗರದಲ್ಲಿ ವೃದ್ಧರು, ಮಹಿಳೆಯರ ನಿದ್ದೆಗೆಡಿಸಿರುವ ಸರಗಳ್ಳರು ಈಗ ರೈಲು ನಿಲ್ದಾಣದ ಸಮೀಪ ಕ್ರಾಸಿಂಗ್ಗಾಗಿ, ರೆಡ್ ಸಿಗ್ನಲ್ನಲ್ಲಿ ನಿಲ್ಲುವ ರೈಲುಗಳಲ್ಲೂ ತಮ್ಮ ಕೈಚಳಕ ಆರಂಭಿಸಿದ್ದು, ಮಹಿಳಾ ಪ್ರಯಾಣಿಕರು ಆತಂಕಗೊಂಡಿದ್ದಾರೆ.
ನಾಲ್ಕು ದಿನಗಳ ಅಂತರದಲ್ಲಿ ಎರಡು ರೈಲುಗಳಲ್ಲಿ ಕತ್ತಲೆ ವೇಳೆಯೇ ಸರಗಳ್ಳತನ ನಡೆದಿದೆ. ಅದರಲ್ಲೂ ನಗರ ಪ್ರವೇಶಿಸಿ ನಿಲ್ದಾಣದ ಸಮೀಪದಲ್ಲಿ ಪ್ಲಾಟ್ಫಾರಂ ಕ್ಲಿಯರೆನ್ಸ್ಗಾಗಿ ನಿಂತಿರುವ ರೈಲುಗಳನ್ನೇ ಸರಗಳ್ಳರು ಟಾರ್ಗೆಟ್ ಮಾಡುತ್ತಿದ್ದಾರೆ. ಲೇಡಿಸ್ ಕೋಚ್, ರಿಸರ್ವೇಷನ್ ಕೋಚ್ ಯಾವುದೇ ಆಗಿರಲಿ, ಸರ ಧರಿಸಿದ ಮಹಿಳೆಯರು ಕಂಡರೆ ರೈಲಿನೊಳಗೆ ನುಗ್ಗುತ್ತಾರೆ. ರೈಲು ಹೊರಡಲು ಆರಂಭಿಸುತ್ತಿದ್ದಂತೆಯೇ ಕ್ಷಣಾರ್ಧದಲ್ಲಿ ಸರ ಕಿತ್ತುಕೊಂಡು, ಚಲಿಸುವ ರೈಲಿನಿಂದ ಕೆಳಗೆ ಎಗರಿ ಕತ್ತಲೆಯಲ್ಲಿ ಪರಾರಿಯಾಗುತ್ತಾರೆ.
ಆಂಧ್ರಪ್ರದೇಶದ ವಿಜಯವಾಡ ಮೂಲದ ಸ್ವರ್ಣಲತಾ (36) ಎಂಬುವವರು, ಪ್ರವಾಸದ ಮೇಲೆ ಕುಟುಂಬ ಸದಸ್ಯರೊಂದಿಗೆ ಮೈಸೂರಿಗೆ ಹೋಗಿದ್ದರು. ಸೆ.9ರಂದು ಕಾವೇರಿ ಎಕ್ಸ್ಪ್ರೆಸ್ ರೈಲಿನಲ್ಲಿ ಮಹಿಳಾ ಕೋಚ್ನಲ್ಲಿ ಬೆಂಗಳೂರಿಗೆ ಮರಳುತ್ತಿದ್ದರು. ರಾತ್ರಿ 9 ಗಂಟೆಗೆ ಮೈಸೂರಿನಿಂದ ಹೊರಟ ರೈಲು, 11.30ರ ಸುಮಾರಿಗೆ ನಗರ ಪ್ರವೇಶಿಸಿ ರೈಲು ನಿಲ್ದಾಣದಿಂದ ಸ್ವಲ್ಪವೇ ದೂರದಲ್ಲಿ ರೆಡ್ ಸಿಗ್ನಲ್ ಇದ್ದ ಕಾರಣ ನಿಲುಗಡೆಯಾಗಿತ್ತು. ಈ ವೇಳೆ ಅಕ್ರಮವಾಗಿ ಲೇಡಿಸ್ ಕೋಚ್ಗೆ ನುಗ್ಗಿದ ಸುಮಾರು 22ರಿಂದ 25 ವರ್ಷದ ದುಷ್ಕರ್ಮಿಯೊಬ್ಬ, 55 ಸಾವಿರ ರೂ. ಮೌಲ್ಯದ 20 ಗ್ರಾಂ ತೂಕದ ಸರವನ್ನು ದೋಚಿ ರೈಲಿನಿಂದ ಹೊರಗೆ ಜಿಗಿದು ಕ್ಷಣಾರ್ಧದಲ್ಲಿ ಕತ್ತಲೆಯಲ್ಲಿ ಕಣ್ಮರೆಯಾಗಿದ್ದಾನೆ.
40 ಗ್ರಾಂ ಸರ ಕಳವು : ಮತ್ತೊಂದು ಪ್ರಕರಣದಲ್ಲಿ ಪಾಂಡವಪುರ ಮೂಲದ ಸರಸ್ವತಿ, ತಾಳಗುಪ್ಪ ಎಕ್ಸ್ಪ್ರೆಸ್ ರೈಲಿನಲ್ಲಿ ಶಿವಮೊಗ್ಗದಿಂದ ಪಾಂಡವಪುರಕ್ಕೆ ಸಹೋದರಿಯರ ಜೊತೆ ಸೆ.12ರಂದು ಪ್ರಯಾಣಿಸುತ್ತಿದ್ದರು. ಎಲ್ಲರೂ ತಮ್ಮ ಸೀಟುಗಳಲ್ಲಿ ನಿದ್ರೆಗೆ ಜಾರಿದ್ದರು. ರೈಲು, ಬಾಪೂಜಿ ನಗರದ ‘ಕೃಷ್ಣದೇವರಾಯ ಹಾಲ್ಟ್’ನಲ್ಲಿ ನಸುಕಿನ 4.40ರ ಸುಮಾರಿಗೆ ನಿಂತಿದ್ದಾಗ ದುಷ್ಕರ್ಮಿಯೊಬ್ಬ ಮಲಗಿದ್ದ ಸರಸ್ವತಿ ಅವರ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಸರದ ಮೌಲ್ಯ 1.08 ಲಕ್ಷ ರೂ. ಎಂದು ಸರಸ್ವತಿ ದೂರಿನಲ್ಲಿ ತಿಳಿಸಿದ್ದಾರೆ
Recent Comments