Cnewstv.in / 08.01.2022 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಮೇಕೆದಾಟು ಯೋಜನೆ : ಪರ-ವಿರೋಧ ಮುಂದೇನು ??
ಮೇಕೆದಾಟು ಯೋಜನೆ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು ಆತಂಕ ಮೂಡಿಸಿದೆ ಮುಂದೇನು ಮಾಡಬೇಕು ಎಂದು ಸರ್ಕಾರ ಯೋಚನೆ ಮಾಡ್ತಾ ಇದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಮಾತ್ರ ಸದ್ದು ಮಾಡುತ್ತಾ ಇರುವುದು ಮೇಕೆದಾಟು ಯೋಜನೆ.
ಹೌದು ಕಾವೇರಿ ನದಿ ನೀರಿನ ಹಂಚಿಕೆ ವಿಚಾರವಾಗಿ ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ದಶಕಗಳ ಕಾಲ ಹೊಗೆಯಾಡುತ್ತಿದ್ದ ವಿವಾದಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿದ ಬೆನ್ನಲ್ಲೇ, ಇದೀಗ ಮೇಕೆದಾಟು ವಿವಾದ ಭುಗಿಲೆದ್ದಿದೆ.
ರಾಜಧಾನಿ ಬೆಂಗಳೂರಿಗೆ ಪೂರ್ಣ ಪ್ರಮಾಣದಲ್ಲಿ ಕಾವೇರಿ ಕುಡಿಯುವ ನೀರು ಒದಗಿಸುವುದು ಮೇಕೆದಾಟು ಯೋಜನೆಯ ಮೂಲ ಉದ್ದೇಶ. ರಾಜ್ಯ ಸರಕಾರ ರೂಪಿಸಿರುವ ಈ ಯೋಜನೆ ಅನುಷ್ಠಾನವಾದರೆ ಭವಿಷ್ಯದಲ್ಲಿ ಕುಡಿಯುವ ನೀರಿನ ವಿಚಾರದಲ್ಲಿ ಒಳಿತಾಗಲಿದೆ.
ಮೇಕೆದಾಟು ಪ್ರದೇಶದಲ್ಲಿ ಜಲಾಶಯ ನಿರ್ಮಿಸಿ 67.16 ಟಿಎಂಸಿ ನೀರು ಸಂಗ್ರಹ ಮಾಡುವುದು ಹಾಗೂ ಕುಡಿಯುವ ನೀರಿನ ಜತೆಗೆ 440 ಮೆ.ವಾ ವಿದ್ಯುತ್ ಉತ್ಪಾದನೆ ಮಾಡುವುದು ಯೋಜನೆಯ ಗುರಿ. ಒಂಟಿಗುಂಡ ಬಳಿಯಲ್ಲಿ ಜಲಾಶಯ ನಿರ್ಮಾಣ ಮಾಡುವುದು 67.16 ಟಿಎಂಸಿ ನೀರು ಸಂಗ್ರಹ ಮಾಡುವುದು.
ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆಗೆ 4.75 ಟಿಎಂಸಿ ಬಳಕೆ ಮಾಡುವುದು ಯೋಜನೆಯ ಪ್ರಮುಖ ಉದ್ದೇಶ. ಮೇಕೆದಾಟು ಯೋಜನೆಯಿಂದಾಗಿ ಬೊಮ್ಮಸಂದ್ರ, ಗಾಳೆಬೊರೆ, ಮಡಿವಾಳ, ಕೊಗ್ಗವಾಡಿ, ನೆಲಲೂರ ದೊಡ್ಡಿ,ಸಂತಗೆರೆ ಸೇರಿದಂತೆ ಮತ್ತಿತರರ ಜನವಸತಿ ಪ್ರದೇಶಗಳು ಮುಳುಗಡೆಯಾಗಲಿವೆ. 4,176 ಹೆಕ್ಟೇರ್ ಅರಣ್ಯ,280 ಹೆಕ್ಟೇರ್ ಕಂದಾಯ ಭೂಮಿ ಯೋಜನೆಗೆ ಅಗತ್ಯವಿದ್ದು ಅದರಲ್ಲಿ 4,500 ಎಕ್ರೆ ಪ್ರದೇಶ ವನ್ಯಜೀವಿ ಅರಣ್ಯವಾಗಿರುವುದು ವಿಶೇಷ.
ಕೆಆರ್ಎಸ್ನಿಂದ ಹರಿಯುವ ನೀರಿಗೆ ತಡೆಹಾಕಿ ಜಲಾಶಯದಲ್ಲಿ ನೀರು ಸಂಗ್ರಹ ಮಾಡಲಾಗುತ್ತದೆ. ಇದರಿಂದ ತಮಿಳುನಾಡಿಗೆ ಸಮಸ್ಯೆಯುಂಟಾಗುತ್ತದೆ ಎಂಬುದು ಆ ರಾಜ್ಯದ ಅಳಲು. ಆದರೆ ನಾವು ನಮ್ಮ ರಾಜ್ಯದ ಪಾಲನ್ನು ಬಳಕೆ ಮಾಡುತ್ತೇವೆ. ಯೋಜನೆಯಿಂದ ತಮಿಳುನಾಡಿನ ಪಾಲಿನ ನೀರಿಗೆ ಧಕ್ಕೆಯಾಗದು ಎಂಬುದು ಕರ್ನಾಟಕದ ಪ್ರತಿಪಾದನೆ. ಸಮುದ್ರಕ್ಕೆ ಹರಿದು ಹೋಗುವ 45 ಟಿಎಂಸಿ ನೀರು ಲಭ್ಯವಾಗಲಿದ್ದು ಆ ನೀರು ಮಾತ್ರ ಬಳಸುತ್ತೇವೆ ಎಂಬ ಸಮರ್ಥನೆಯನ್ನೂ ನೀಡಿದೆ.
ರಾಜ್ಯ ಸರಕಾರ 2008ರಲ್ಲಿ ಮೇಕೆದಾಟು ಯೋಜನೆ ಜಾರಿಗಾಗಿ ಪ್ರಯತ್ನ ನಡೆಸಿತು. ಈ ವೇಳೆ ತಮಿಳುನಾಡು ಸರಕಾರ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತು. 2015ರಲ್ಲಿ ರಾಜ್ಯ ಸರಕಾರ ಪ್ರಧಾನಿಗೆ ಮೇಕೆದಾಟು ವಿಚಾರವಾಗಿ ಪತ್ರ ಬರೆಯಿತು. ಯೋಜನೆ ಜಾರಿಗೆ ಅನುಮತಿ ಕೇಳಲಾಯಿತು.
2017ರಲ್ಲಿ ಕೇಂದ್ರ ಜನಶಕ್ತಿ ಆಯೋಗಕ್ಕೆ 5,912 ಕೋಟಿ ರೂ.ವೆಚ್ಚದಲ್ಲಿ ಡಿಪಿಆರ್ ಸಲ್ಲಿಕೆ ಮಾಡಲಾಯಿತು. ಮತ್ತೆ ತಮಿಳುನಾಡು ಸರಕಾರ ತಗಾದೆ ತೆಗೆದ ಕಾರಣ ಮರು ವಿನ್ಯಾಸಕ್ಕೆ ಸೂಚನೆ ನೀಡಲಾಯಿತು.2019ಕ್ಕೆ ಜಲಶಕ್ತಿ ಇಲಾಖೆಗೆ ರಾಜ್ಯ ಸರಕಾರದಿಂದ ಪತ್ರ ಬರೆದು 9,000 ಕೋಟಿ ರೂ.ಗಳ ಮತ್ತೊಂದು ಡಿಪಿಆರ್ ಸಲ್ಲಿಸಲಾಯಿತು.
ಅಂದಿನಿಂದ ಇಲ್ಲಿಯರೆಗೆ ಕಾವೇರಿ ಪ್ರಾಧಿಕಾರದ ಐದು ಸಭೆಗಳು ನಡೆದಿದ್ದು ಮೇಕೆದಾಟು ಯೋಜನೆ ಜಾರಿ ಪ್ರಸ್ತಾವವಾಗಿದೆಯಾದರೂ ಅನುಮತಿ ದೊರೆತಿಲ್ಲ. ಇದರ ನಡುವೆ 2021ರಲ್ಲಿ ತಮಿಳುನಾಡು ಮುಖ್ಯಮಂತ್ರಿಗೆ ರಾಜ್ಯದ ಮುಖ್ಯಮಂತ್ರಿಗಳಿಂದ ಪತ್ರವೂ ಬರೆಯಲಾಗಿದೆ. ಯೋಜನೆಯಿಂದ ತಮಿಳುನಾಡಿಗೆ ಯಾವುದೇ ರೀತಿಯಲ್ಲೂ ಧಕ್ಕೆಯಾಗದು ಎಂಬುದನ್ನೂ ಪ್ರತಿಪಾದಿಸಲಾಗಿದೆ.
ಇದನ್ನು ಒದಿ : https://cnewstv.in/?p=7414
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv