ಶಿವಮೊಗ್ಗ : ಮುಂಬರುವ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಸರ್ಕಾರದ ಆರೋಗ್ಯ ಮಾರ್ಗಸೂಚಿಯನ್ನು ಪಾಲಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಹವಾಮಾನ ಇಲಾಖೆಯ ಮಾಹಿತಿಯಂತೆ ರಾಜ್ಯದಲ್ಲಿ ಇನ್ನು ಎರಡು ಮೂರು ದಿನಗಳು ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುವ ನೀರಿಕ್ಷೆ ಇದೆ. ಮೋಡ, ಮಳೆ, ಶೀತ ವಾತಾವರಣವು ಕೋವಿಡ್ ವೈರಸ್ ಹರಡುವಿಕೆಗೆ ಪೂರಕ ವಾತಾವರಣವಾಗಿರುತ್ತದೆ. ಅಷ್ಟೇ ಅಲ್ಲದೆ ವೈರಸ್ ಜ್ವರ, ಶೀತ, ಕೆಮ್ಮು ಉಸಿರಾಟದ ತೊಂದರೆ, ವಾಂತಿ, ಬೇದಿ ಇತರೆ ಕಾಯಿಲೆಗಳಂತಹ ಅನೇಕ ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿರುತ್ತದೆ. ಈ ಸವಾಲುಗಳ ಸಂದರ್ಭದಲ್ಲಿ ಮೈಮರೆಯದೇ ಅಗತ್ಯವಿರುವ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಹಬ್ಬ ಆಚರಣೆಗಳನ್ನು ಸರಳವಾಗಿ ಆಚರಣೆ ಮಾಡಿ, ಮನೆ ಮತ್ತು ಪೂಜಾ ಸ್ಥಳಗಳಲ್ಲಿ ಜನ ಸಂದಣಿಯಾಗದಂತೆ ನೋಡಿಕೊಳ್ಳಬೇಕು. ಜಾತ್ರೆ ಉತ್ಸವಗಳಿಗೆ ಬೇರೆ ಊರುಗಳಿಗೆ ಹೋಗುವುದಾಗಲಿ ಅಥವಾ ಜನರನ್ನು ಕರೆಸಿಕೊಳ್ಳುವುದಾಗಲಿ ಮಾಡಬೇಡಬಾರದು. ಅನಗತ್ಯವಾಗಿ ತಿರುಗಾಡುವುದು ಅಥವಾ ಪ್ರಯಾಣ ಕೈಗೊಳ್ಳುವುದನ್ನು ಮಾಡಬೇಡಿ. ಶುಭಾಶಯಗಳನ್ನು ಕೈ ಸ್ಪರ್ಶವಿಲ್ಲದೆ ದೂರದಿಂದಲೇ ತಿಳಿಸಿ. ಪುನಃ ಬಳಸಬಹುದಾದ ಮುಖಗವಸು ಅಥವಾ ಮಾಸ್ಕ್ ಕಡ್ಡಾಯವಾಗಿ ಬಳಸಿ. ಆಗಾಗ್ಗೆ ಸೋಪು ನೀರಿನಿಂದ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ಬಾಯಿ, ಮೂಗು ಮತ್ತು ಕಣ್ಣನ್ನು ಪದೇ ಪದೇ ಮುಟ್ಟಿಕೊಳ್ಳಬೇಡಿ. ಸಾರ್ವಜನಿಕ ಸ್ಥಳ ಅಥವಾ ಎಲ್ಲೆಂದರಲ್ಲಿ ಉಗಿಯಬೇಡಿ. ಎಲ್ಲರೂ ಸಾಮಾನ್ಯವಾಗಿ ಮುಟ್ಟುವ ಸ್ಥಳ ಅಥವಾ ಜಾಗಗಳನ್ನು ಕ್ರಿಮಿ ನಾಶಕದಿಂದ ತೊಳೆಯಿರಿ. ಎಲ್ಲಾ ಸಂದರ್ಭಗಳಲ್ಲಿಯೂ 6 ಅಡಿ ಅಂತರವನ್ನು ಕಾಯ್ದುಕೊಳ್ಳಿ ಮತ್ತು ಗುಂಪು ಗೂಡುವುದನ್ನು ಪ್ರೋತ್ಸಾಹಿಸಬೇಡಿ ಎಂದು ಅವರು ತಿಳಿಸಿದ್ದಾರೆ.
C News TV Kannada News Online in cnewstv