ಶಿವಮೊಗ್ಗ: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿ ಶಿವಮೊಗ್ಗಕ್ಕೂ ಬಂದಿದ್ದರು. ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ವಾರ ಪ್ರವಾಸ ಕೈಗೊಂಡಿದ್ದ ಗಾಂಧೀಜಿ ಅವರು ಉಳಿಸಿಹೋಗಿರುವ ಕುರುಹುಗಳು ಇನ್ನೂ ಶಿವಮೊಗ್ಗದಲ್ಲಿವೆ. ಈ ಕುರುಹುಗಳನ್ನು ನೋಡಿದಾಗ ಮಹಾತ್ಮಾ ಗಾಂಧಿಜಿ ಮತ್ತೆ ಮತ್ತೆ ನಮಗೆ ನೆನಪಾಗುತ್ತಾರೆ. ಗಾಂಧಿಜಿ ಅವರು ಶಿವಮೊಗ್ಗದಲ್ಲಿ ಉಳಿಸಿರುವ ಕುರುಹುಗಳೇನು ಎಂಬ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.
ವಕೀಲ ದಿವಂಗತ ವೆಂಕಟಸುಬ್ಬ ಶಾಸ್ತ್ರಿ ಅವರ ಸತತ ಪ್ರಯತ್ನದ ಫಲವಾಗಿ ಮಹಾತ್ಮಾ ಗಾಂಧೀಜಿ ಹಾಗೂ ಅವರ ಪತ್ನಿ ಕಸ್ತೂರ ಬಾ ಅವರು 1927ರ ಆಗಸ್ಟ್ 14 ರಂದು ಶಿವಮೊಗ್ಗಕ್ಕೆ ಆಗಮಿಸಿ ಜಿಲ್ಲೆಯಲ್ಲಿ ಒಂದು ವಾರ ಪ್ರವಾಸ ಕೈಗೊಂಡಿದ್ದರು. ಶಿವಮೊಗ್ಗಕ್ಕೆ ಆಗಮಿಸಿದ್ದ ಗಾಂಧೀಜಿ ಅವರು ಇಂದಿನ ಪ್ರಧಾನ ಅಂಚೆ ಕಚೇರಿ ಎದುರಿದ್ದ ನ್ಯಾಷನಲ್ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು. ಹೀಗಾಗಿ ಲಾಡ್ಜ್ ನ ಮಾಲೀಕರು ಗಾಂಧೀಜಿ ಬಂದಿದ್ದ ನೆನಪಿಗಾಗಿ ನ್ಯಾಷನಲ್ ಹೋಟೆಲ್ ಎದುರಿನ ಅಂದರೆ ಇಂದಿನ ಪ್ರಧಾನ ಅಂಚೆ ಕಚೇರಿ ಎದುರು ಗಾಂಧೀಜಿ ಹಾಗೂ ಕಸ್ತೂರ ಬಾ ಅವರಿಂದ ಎರಡು ತೆಂಗಿನ ಗಿಡಗಳನ್ನು ನೆಡಿಸಿದ್ದರು. ಇದೀಗ ಆ ತೆಂಗಿನ ಮರಗಳು ಮುಗಿಲೆತ್ತರಕ್ಕೆ ಬೆಳೆದು ನಿಂತಿವೆ. ಈ ತೆಂಗಿನ ಮರಗಳನ್ನು ನೋಡಿದಾಗಲೆಲ್ಲ ಗಾಂಧೀಜಿ ಮತ್ತೆಮತ್ತೆ ನೆನಪಾಗುವುದರಲ್ಲಿ ಅನುಮಾನವೇ ಇಲ್ಲ.
ಶಿವಮೊಗ್ಗಕ್ಕೆ ಆಗಮಿಸಿದ್ದ ಗಾಂಧಿಜಿ ಅವರು ನಗರದ ಮಧ್ಯಭಾಗದಲ್ಲಿದ್ದ ಉದ್ಯಾನವನದಲ್ಲಿ ಬಹಿರಂಗ ಸಮಾವೇಶ ನಡೆಸಿ ಜನರಿಗೆ ಸ್ವಾತಂತ್ರ್ಯದ ಮಹತ್ವ ತಿಳಿಸಿಕೊಟ್ಟಿದ್ದರು. ಹೀಗಾಗಿ ಆ ಉದ್ಯಾನವನಕ್ಕೆ ಮಹಾತ್ಮ ಗಾಂಧಿ ಉದ್ಯಾನವನ ಎಂದು ಕರೆಯಲಾಗುತ್ತಿದೆ.
ಇದಲ್ಲದೆ ಶಿವಮೊಗ್ಗಕ್ಕೆ ಗಾಂಧೀಜಿ ಬಂದಿದ್ದರ ನೆನಪಿಗಾಗಿ ಶಿವಮೊಗ್ಗದ ಪ್ರಮುಖ ವಾಣಿಜ್ಯ ಕೇಂದ್ರಕ್ಕೆ ಗಾಂಧಿ ಬಜಾರ್ ಎಂದೂ ಕರೆಯಲಾಗುತ್ತಿದೆ. ಶಿವಮೊಗ್ಗಕ್ಕೆ ಆಗಮಿಸಿದ್ದ ಗಾಂಧೀಜಿ ಅವರು ಆನಂದಪುರ, ನಗರ, ತೀರ್ಥಹಳ್ಳಿಗೂ ಭೇಟಿ ನೀಡಿದ್ದರು ಎಂಬುದು ಇನ್ನೊಂದು ವಿಶೇಷ.
Recent Comments