ಮಲೆನಾಡಿನ ಹೆಬ್ಬಾಗಿಲು ಎನಿಸಿಕೊಂಡಿರು ಶಿವಮೊಗ್ಗ ಜಿಲ್ಲೆಯಲ್ಲಿಯೇ ಈ ಬಾರಿ ಭೀಕರ ಬರಗಾಲದ ಛಾಯೆ ಕಾಣಿಸಿಕೊಂಡಿದೆ. ಜಿಲ್ಲೆಯ ಅರೆಮಲೆನಾಡು ತಾಲೂಕುಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಸೊರಬ ಹಾಗೂ ಶಿಕಾರಿಪುರ ತಾಲೂಕಿನ ಕೆಲ ಗ್ರಾಮಗಳ ಜನರು ಜೀವ ಜಲವನ್ನು ಅರಸಿ ಕಿಲೋಮೀಟರ್ ಗಟ್ಟಲೆ ಅಲೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಕೆರೆಕಟ್ಟೆಗಳು ಸಂಪೂರ್ಣವಾಗಿ ಒಣಗಿದ್ದು ನೀರಿನ ಸೆಲೆಯೇ ಇಲ್ಲದ ಸ್ಥಿತಿ ನಿರ್ಮಾಣವಾಗಿದ್ದರಿಂದ ಜಾನುವಾರುಗಳ ಸ್ಥಿತಿ ಹೇಳತೀರದಾಗಿದೆ..
ಶಿವಮೊಗ್ಗ ಜಿಲ್ಲೆಯ ಏಳು ತಾಲೂಕುಗಳ ಪೈಕಿ ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ ಹಾಗೂ ಸೊರಬ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ 216 ಗ್ರಾಮಗಳಲ್ಲಿ ತೀರ್ವ ತರನಾದ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದು ಎಂದು ಜಿಲ್ಲಾಡಳಿತ ಮಾಹಿತಿ ಕಲೆಹಾಕಿತ್ತು. ಆದರೆ ಮಾರ್ಚ್ ಆರಂಭದಲ್ಲೇ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ, ಉಡುಗಣಿ, ತೊಗರ್ಸಿ, ಸೊರಬ ತಾಲೂಕಿನ ಆನವಟ್ಟಿ, ಜಡೆ ಭಾಗದ ಗ್ರಾಮಗಳಲ್ಲಿ ತೀವ್ರ ತರನಾದ ಬರ ಆವರಿಸಿತ್ತು. ಇದುವರೆಗೆ ಜಿಲ್ಲೆಯ 29 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಇನ್ನು ಕೆಲ ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಇನ್ನೂ ಇಲ್ಲಿಯವರೆಗೂ 1032 ಟ್ಯಾಂಕರ್ ಗಳಲ್ಲಿ ನೀರನ್ನು ಸರಬರಾಜು ಮಾಡಲಾಗಿದೆ. ಇನ್ನು ಟ್ಯಾಂಕರ್ ನಲ್ಲಿ ನೀರು ಪೂರೈಕೆ ಮಾಡುವ ಗ್ರಾಮಗಳಲ್ಲಿ ಪ್ರತಿಕುಟುಂಬಕ್ಕೆ ನಾಲ್ಕರಿಂದ ಎಂಟು ಬಿಂದಿಗೆ ನೀರು ಪ್ರತಿದಿನ ನೀಡಲಾಗುತ್ತಿದೆ. ಆದರೆ ಈ ನೀರಿನಲ್ಲಿ ಕುಟುಂಬದವರ ನಿತ್ಯಕರ್ಮ ಮುಗಿಸುವ ಜೊತೆಗೆ ಜಾನಿವಾರುಗಳ ಬಾಯಾರಿಕೆ ನೀಗಿಸುವುದು ಕಷ್ಟವಾಗಿದೆ.
ತೊಗರ್ಸಿ ಸಮೀಪದ ಕಣಸೋಗಿ ಗ್ರಾಮದಲ್ಲಿ ತೀವ್ರ ತರನಾದ ನೀರಿನ ಅಭಾವ ಕಾಣಿಸಿಕೊಂಡಿದ್ದರಿಂದ ಈ ಗ್ರಾಮದಲ್ಲಿ ಬರೋಬ್ಬರಿ 13 ಕೊಳವೆಬಾವಿ ಕೊರೆಯಿಸಲಾಯಿತಾದರೂ ಒಂದರಲ್ಲೂ ನೀರು ಬಂದಿಲ್ಲ. ಇದು ಅರೆಮಲೆನಾಡು ಭಾಗದಲ್ಲಿನ ಬರದ ಭೀಕರತೆಯನ್ನು ತೋರುತ್ತದೆ..
Recent Comments