Breaking News

ಪೌರಾಡಳಿತ ಸಚಿವ ಸಿ.ಎಸ್​ ಶಿವಳ್ಳಿ ಹೃದಯಾಘಾತದಿಂದ ನಿಧನ

ಶಿವಮೊಗ್ಗ: ಪೌರಾಡಳಿತ ಸಚಿವ ಸಿ.ಎಸ್​ ಶಿವಳ್ಳಿ ಅವರು ಇಂದು ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಧಾರವಾಡದ ಕಟ್ಟಡ ದುರಂತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದ ಅವರಿಗೆ ಶುಕ್ರವಾರ ಹೃದಯಾಘಾತ ಉಂಟಾಯಿತು. ಕೂಡಲೇ ಅವರನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಧಾರವಾಡದ ಕಟ್ಟಡದ ದುರಂತ ಸ್ಥಳದಲ್ಲೇ ಮಾರ್ಚ್​ 20 ರಿಂದ ಬೀಡು ಬಿಟ್ಟಿದ್ದ ಸಿ.ಎಸ್​ ಶಿವಳ್ಳಿ ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡಿದ್ದರು. ಗುರುವಾರ ಮಧ್ಯರಾತ್ರಿಯ ವರೆಗೆ ಅವರು ಅಲ್ಲಿಯೇ ಇದ್ದರು. ಇಂದೂ ಕೂಡ ಅಲ್ಲಿಯೇ ಇದ್ದರು. ಈ ವೇಳೆ ಅವರಿಗೆ ಹೃದಯಾಘಾತ ಸಂಭವಿಸಿದೆ.
ಕಳೆದ ತಿಂಗಳು ವಿಷಾಹಾರ ಸೇವನೆಯಿಂದಾಗಿ ಅವರು ಅಸ್ವಸ್ಥಗೊಂಡು ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.
ಸಚಿವ ಶಿವಳ್ಳಿ ಅವರಿಗೆ ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರಿದ್ದಾರೆ.
ಶಿವಳ್ಳಿ ಅವರು ಕುಂದಗೋಳ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

Leave a Reply

Your email address will not be published. Required fields are marked *

*