ತೀರ್ಥಹಳ್ಳಿ: ಪಟ್ಟಣದ ತುಂಗಾನದಿ ತೀರದಲ್ಲಿ ಸಿಡಿಮದ್ದು ಸ್ಫೋಟಗೊಂಡು, ಬಾಲಕನೋರ್ವ ಗಾಯಗೊಂಡ ಘಟನೆ ನಡೆದಿದೆ.
ತೀರ್ಥಹಳ್ಳಿಯ ತೇಜು(9) ಸ್ಫೋಟದಿಂದ ಗಾಯಗೊಂಡ ಬಾಲಕ.
ಎಳ್ಳಮಾವಾಸ್ಯೆ ಜಾತ್ರೆ ಅಂಗವಾಗಿ ತೀರ್ಥಹಳ್ಳಿ ಪಟ್ಟಣದ ತುಂಗಾನದಿ ತೀರದಲ್ಲಿ ತೆಪ್ಪೋತ್ಸವ ಆಚರಣಾ ಸಮಿತಿಯು ಜನವರಿ 1 ರಂದು ತೆಪ್ಪೋತ್ಸವ ಆಯೋಜಿಸಿತ್ತು. ತೆಪ್ಪೋತ್ಸವ ಮುಗಿದ ನಂತರ ಎರಡೂವರೆ ಗಂಟೆ ಸಿಡಿಮದ್ದು ಪ್ರದರ್ಶನ ಕಾರ್ಯಕ್ರಮ ಸಹ ನಡೆಸಲಾಗಿತ್ತು. ಸಿಡಿಮದ್ದು ಪ್ರದರ್ಶನ ನಡೆದ ನಾಲ್ಕು ದಿನಗಳ ಬಳಿಕ ಜ.5 ರ ಭಾನುವಾರ ಸಂಜೆ ನದಿ ತೀರದಲ್ಲಿ ಸಿಡಿಯದೇ ಅರ್ಧಂಬರ್ಧ ಉಳಿದಿದ್ದ ಪಟಾಕಿಗಳನ್ನು 3 ಬಾಲಕರು ಒಟ್ಟುಗೂಡಿಸುವ ಪ್ರಯತ್ನದಲ್ಲಿದ್ದಾಗ ಏಕಾಏಕಿ ಸಿಡಿದ ಪರಿಣಾಮ ಬಾಲಕ ತೇಜು ತೀವ್ರವಾಗಿ ಗಾಯಗೊಂಡಿದ್ದು, ಇಬ್ಬರು ಪಾರಾಗಿದ್ದಾರೆ.
ಗಾಯಗೊಂಡ ಬಾಲಕನಿಗೆ ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕನ ಮೈಕೈ, ಮುಖ ಸುಟ್ಟು ತೀವ್ರ ತರಹದ ಗಾಯಗಳಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
C News TV Kannada News Online in cnewstv