ಶಿವಮೊಗ್ಗ: ರೈತ ವಿರೋಧಿಯಾದ ಮೂರು ಕೃಷಿ ಕಾಯ್ದೆಗಳನ್ನ ವಾಪಸ್ ಪಡೆಯುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಒತ್ತಾಯಿಸಿದೆ.
ಶಿವಮೊಗ್ಗ ಡಿಸಿ ಕಚೇರಿ ಆವರಣದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್ ಆರ್ ಬಸವರಾಜಪ್ಪ ನೇತೃತ್ವದಲ್ಲಿ
ಪ್ರತಿಭಟನೆ ನಡೆಸಿದ ರೈತರು, ಎಂ ಎಸ್ ಪಿ ಯನ್ನು ಕಾನೂನಾತ್ಮಕವಾಗಿ ಜಾರಿ ಮಾಡಬೇಕು ಹಾಗೂ ವಿದ್ಯುತ್ ಶಕ್ತಿ ಖಾಸಗಿಕರಣ ಮಾಡಬಾರದು ಎಂದು ಒತ್ತಾಯಿಸಿದ್ದಾರೆ.
ರೈತರು ಈ ಹಿಂದೆ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಲಿಖಿತ ಭರವಸೆ ಸಹ ನೀಡಿತ್ತು. ಭರವಸೆ ನೀಡಿ ಎರಡು ವರ್ಷ ಕಳೆದರೂ ಸರ್ಕಾರ ಎಂಎಸ್ಪಿ ಜಾರಿ ಮಾಡಿಲ್ಲ. ಹೀಗಾಗಿ ಹರಿಯಾಣದ ಶಂಭು ಗಡಿಯಲ್ಲಿ ರೈತರು ಮತ್ತೆ ಹೋರಾಟ ಆರಂಭಿಸಿದ್ದಾರೆ. ಅದರಲ್ಲೂ ರೈತ ನಾಯಕ ಜಗತ್ ಸಿಂಗ್ ದಲ್ಲೈವಾಲ ಅವರು 38 ದಿನದಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದು, ಆರೋಗ್ಯ ಹದಗೆಡುತ್ತಿದ್ದು, ಸರ್ಕಾರ ಕೂಡಲೇ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೇ ಹೋರಾಟ ತೀವ್ರಗೊಳಿಸಲಾಗುವುದು ಎಂದು ರೈತರು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ರೈತರಾದ ಹಿಟ್ಟೂರು ರಾಜು, ಕೆ.ರಾಘವೇಂದ್ರ, ಹನುಮಂತಪ್ಪ, ಪಂಚಾಕ್ಷರಿ ಮತ್ತಿತರರು ಉಪಸ್ಥಿತರಿದ್ದರು.

Recent Comments