Breaking News

ವಿವಿಧ ಯೋಜನೆಗಳಿಗೆ ಆನ್‍ಲೈನ್ ಅರ್ಜಿ ಆಹ್ವಾನ

Cnewstv / 26.08.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ವಿವಿಧ ಯೋಜನೆಗಳಿಗೆ ಆನ್‍ಲೈನ್ ಅರ್ಜಿ ಆಹ್ವಾನ..

ಶಿವಮೊಗ್ಗ : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2023-24ನೇ ಸಾಲಿನ ಅಲ್ಪಸಂಖ್ಯಾತರ ಸಮುದಾಯದ ಕ್ರೈಸ್ತ, ಮುಸಲ್ಮಾನ, ಜೈನ್, ಆಂಗ್ಲೋಇಂಡಿಯನ್ಸ್, ಬೌದ್ಧ, ಸಿಖ್ ಮತ್ತು ಪಾರ್ಸಿ ಜನಾಂಗದವರಿಂದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರಿವು ರಿನಿವಲ್ ಯೋಜನೆ – ವೃತ್ತಿಪರ ಕೋರ್ಸ್ ಮಾಡಬಯಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವ್ಯಾಸಂಗ ಪೂರ್ಣಗೊಳಿಸುವವರೆಗೆ ಪ್ರತಿ ವರ್ಷ ರೂ. 50 ಸಾವಿರದಿಂದ ರೂ. 3.00 ಲಕ್ಷಗಳ ವರೆಗೆ ಸಾಲ ನೀಡಲಾಗುವುದು. ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ನಿಗದಿಪಡಿಸಿರುವುದಿಲ್ಲ.

ಶ್ರಮಶಕ್ತಿ ಸಾಲ ಯೋಜನೆ – ಕುಲಕಸುಬುದಾರರಿಗೆ ತರಬೇತಿ ನೀಡಿ ಅವರು ತಮ್ಮ ಕಲಾತ್ಮಕ ಮತ್ತು ತಾಂತ್ರಿಕ ಕೌಶಲ್ಯವನ್ನು ವೃದ್ಧಿಸಿಕೊಂಡು ಅದೇ ಕಸುಬನ್ನು ಮುಂದುವರೆಸಲು ಅಥವಾ ಸಣ್ಣ ವ್ಯಾಪಾರವನ್ನು ಪ್ರಾರಂಭಿಸಲು ಅಥವಾ ಅಭಿವೃದ್ಧಿಗೊಳಿಸಲು ನಿಗಮದಿಂದ ಶೇ. 50% ಸಹಾಯಧನದೊಂದಿಗೆ ಕಡಿಮೆ ಬಡ್ಡಿ ದರದಲ್ಲಿ ರೂ. 50 ಸಾವಿರ ಸಾಲ ಸೌಲಭ್ಯವನ್ನು ನೀಡಲಾಗುವುದು. ಶ್ರಮಶಕಿ ಯೋಜನೆ (ವಿಶೇಷ ಮಹಿಳಾ) – ವಿಧವೆ, ವಿಚ್ಛೇದಿತೆ, ವಿವಿಧ ಯೋಜನೆಗಳಿಗೆ ಆನ್‍ಲೈನ್ ಅರ್ಜಿ ಆಹ್ವಾನಅವಿವಾಹಿತ ಮಹಿಳೆಯರಿಗೆ ವಿವಿಧ ಆರ್ಥಿಕಚಟುವಟಿಕೆಗಳನ್ನು ಕೈಗೊಳ್ಳಲು ಶೇ. 50% ರ ಸಹಾಯಧನ ಮತ್ತು ಶೇ.50% ರಷ್ಟು ಸಾಲ ಸೇರಿ ಒಟ್ಟು ರೂ. 50 ಸಾವಿರ ಸಾಲವನ್ನು ನೀಡಲಾಗುವುದು.

ಸ್ವಾವಲಂಭಿ ಸಾರಥಿ ಯೋಜನೆ – ಟ್ಯಾಕ್ಸಿ/ಗೂಡ್ಸ್/ಪ್ಯಾಸೆಂಜರ್ ಆಟೋರಿಕ್ಷಾ ವಾಹನ ಖರೀದಿಸಲು ಬಯಸುವವರಿಗೆ ಬ್ಯಾಂಕಿನಿಂದ ಸಾಲ ಮಂಜೂರಾತಿಯಾಗಿದ್ದಲ್ಲಿ ನಿಗಮದಿಂದ ವಾಹನದ ಮೌಲ್ಯದ ಶೇ.50%ರಷ್ಟು ಸಹಾಯಧನ ಗರಿಷ್ಠ ರೂ. 3.00 ಲಕ್ಷವನ್ನು ನೀಡಲಾಗುವುದು.

ಸಮುದಾಯ ಆಧಾರಿತ ತರಬೇತಿ ಯೋಜನೆ – ನಿರುದ್ಯೋಗಿ ಯುವಕ-ಯುವತಿಯರಿಗೆ ಸ್ವಉದ್ಯೋಗ/ಕಚೇರಿ, ಕಂಪನಿ, ಉದ್ದಿಮೆಗಳಲ್ಲಿ ಉದ್ಯೋಗ ದೊರಕಿಸುವ ಸಲುವಾಗಿ ಭಾರಿ ವಾಹನ ಯೋಜನೆ, ಶಾರ್ಟ್‍ಹ್ಯಾಂಡ್, ಸೆಕ್ಯೂರಿಟಿ ಸರ್ವಿಸಸ್, ಬ್ಯೂಟಿಪಾರ್ಲರ್ ಕೋರ್ಸ್‍ಗಳಿಗೆ ತರಬೇತಿ ನೀಡಲಾಗುವುದು.
ಗಂಗಾಕಲ್ಯಾಣ ಯೋಜನೆ – ಗ್ರಾಮೀಣ ಪ್ರದೇಶದಲ್ಲಿ ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ಕೊಳವೆ ಬಾವಿ ಕೊರೆಯಲು ಪಂಪು. ಅಳವಡಿಕೆ ಹಾಗೂ ನೀರಾವರಿ ವಿದ್ಯುದೀಕರಣಕ್ಕೆ ಸಂಪೂರ್ಣ ಸಹಾಯಧನ ನೀಡಲಾಗುವುದು. ಈ ಯೋಜನೆಯಡಿಯಲ್ಲಿ 1 ರಿಂದ 5 ಎಕರೆಯವರಿಗೆ ಖುಷ್ಕಿ ಜಮೀನು ಹೊಂದಿರುವ ಫಲಾನುಭವಿಗೆ ಸಹಾಯಧನವಾಗಿ ಕೊಳವೆ ಬಾವಿಯನ್ನು ಕೊರೆಯಲಾಗುವುದು.

ವೃತ್ತಿ ಪ್ರೋತ್ಸಾಹ ಯೋಜನೆ – ಹಣ್ಣು, ಹಂಪಲು, ಕೋಳಿ ಮತ್ತು ಮೀನು ಮಾರಾಟ, ಎಳನೀರು, ಕಬ್ಬಿನಹಾಲು, ತಂಪು ಪಾನೀಯ ಮಾರಾಟ, ಬೇಕರಿ, ಲ್ಯಾಂಡರಿ, ಡ್ರೈಕ್ಲೀನಿಂಗ್, ಹೇರ್ ಡ್ರೆಸಿಂಗ್, ಸಲೂನ್, ಬ್ಯೂಟಿ ಪಾರ್ಲರ್, ವಾಟರ್‍ವಾಶ್, ಪಂಕ್ಚರ್, ಮೆಕ್ಯಾನಿಕ್ ಶಾಪ್, ದ್ವಿಚಕ್ರ/ತ್ರಿಚಕ್ರ ವಾಹನ ರಿಪೇರಿ, ಬಿದರಿ ವೇರ್ ಕೆಲಸ, ರೇಷ್ಮೆ ರೀಲಿಂಗ್ ಮತ್ತು ಟ್ವಿಸ್ಟಿಂಗ್, ಆಟಿಕೆ ಗೊಂಬೆ ತಯಾರಿಕೆ ಇತ್ಯಾದಿ ಚಟುವಟಿಕೆಗಳನ್ನು ಪ್ರಾರಂಭಿಸಲು ಅಥವಾ ಅಭಿವೃದ್ಧಿಪಡಿಸಲು ನಿಗಮದಿಂದ ಶೇ.50% ಸಹಾಯಧನದೊಂದಿಗೆ ರೂ. 1 ಲಕ್ಷ ಸಾಲ ನೀಡಲಾಗುವುದು.

ವಿದೇಶಿ ವ್ಯಾಸಂಗ ಸಾಲ ಯೋಜನೆ – ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ವ್ಯಾಸಂಗ ಮಾಡಲು ಮಾನ್ಯತೆ ಪಡೆದಿರುವ ಯಾವುದೇ ವಿದೇಶ ವಿಶ್ವ ವಿದ್ಯಾಲಯದಿಂದ ಮತ್ತು ಭಾರತ ದೇಶದ ಪ್ರತಿಷ್ಠೆಯ ಸಂಸ್ಥೆಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ, ವಿದ್ಯಾಭ್ಯಾಸ ಪಡೆಯಲು ರೂ. 20.00 ಲಕ್ಷದವರೆಗೆ ಸಾಲವನ್ನು ನಿಗಮಕ್ಕೆ ಆಸ್ತಿಯ ಅಡಮಾನದ ಮೇಲೆ ಮಾತ್ರ ನೀಡಲಾಗುವುದು.

ಆಸಕ್ತರು ಈ ಎಲ್ಲಾ ಯೋಜನೆಗಳಿಗೆ ಅರ್ಜಿಯನ್ನು ವೆಬ್‍ಸೈಟ್ www.kmdconline.karnataka.gov.in ರಲ್ಲಿ ಸಲ್ಲಿಸಿ, ಅರ್ಜಿಯ ಹಾರ್ಡ್ ಕಾಪಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಸೆ.25 ರೊಳಗಾಗಿ ಜಿಲ್ಲಾ ಕಚೇರಿಗೆ ಸಲ್ಲಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ನಿಗಮದ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08182-228262 ನ್ನು ಸಂಪರ್ಕಿಸುವುದು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*