Cnewstv / 17.04.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಜಗದೀಶ್ ಶೆಟ್ಟರ್ ರವರಿಗೆ ಬಹಿರಂಗ ಪತ್ರ ಬರೆದ ಕೆ ಎಸ್ ಈಶ್ವರಪ್ಪ.
ಶಿವಮೊಗ್ಗ : ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಇದನ್ನು ಖಂಡಿಸಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರು ಜಗದೀಶ್ ಶೆಟ್ಟರ್ ಗೆ ಬಹಿರಂಗ ಪತ್ರ ಬರೆದಿದ್ದಾರೆ. ಹಾಗೂ ಬಿಜೆಪಿ ಪಕ್ಷದ ಸಿದ್ದಾಂತವನ್ನು ಒಪ್ಪಿ ಮತ್ತೆ ಪಕ್ಷಕ್ಕೆ ಬರುವಂತೆ ವಿನಂತಿಸಿದರು.

ಪತ್ರದಲ್ಲಿ ಏನ್ ಇದೆ ??
ಮಾನ್ಯ ಶ್ರೀ ಜಗದೀಶ್ ಶೆಟ್ಟರ್ ಅವರಿಗೆ ನನ್ನ ಆತ್ಮೀಯ ನಮಸ್ಕಾರಗಳು.
ಸುಮಾರು 4 ದಶಕಗಳಿಗೂ ಹೆಚ್ಚಿನ ಕಾಲ ತಾವು ನಂಬಿ ತಮ್ಮ ರಾಜಕೀಯ ಜೀವನವನ್ನು ರೂಪಿಸಿಕೊಂಡಿದ್ದ ತತ್ವ
ಸಿದ್ಧಾಂತ, ರಾಜಕೀಯ ನಿಲುವನ್ನು ತ್ಯಜಿಸಿ ಕಾಂಗ್ರೆಸ್ ಪಕ್ಷದ ಕಡೆ ತಾವು ಮುಖ ಮಾಡಿರುವ ಈ ಬದಲಾದ
ಪರಿಸ್ಥಿತಿಯಲ್ಲಿ ನನಗೆ ನಿಮ್ಮ ಪೂಜ್ಯ ತಂದೆಯವರಾದ ದಿ.ಶಿವಪ್ಪ ಶೆಟ್ಟರು ಬಹಳವಾಗಿ ನೆನಪಾಗುತ್ತಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಟ್ಟ ಪ್ರಭಾವದಲ್ಲಿ ತಮ್ಮ ರಾಜಕೀಯ ಜೀವನ ರೂಪಿಸಿಕೊಂಡ ದಿ.ಶಿವಪ್ಪ
ಶೆಟ್ಟರು, ಭಾರತೀಯ ಜನತಾ ಪಕ್ಷದ ಮೂಲಕ ನಗರ ಸಭೆಯ ಸದಸ್ಯರಾಗಿ, ಮಹಾಪೌರರಾಗಿ, ಶಾಸಕರಾಗಿ
ಎಲ್ಲದಕ್ಕಿಂತ ಮಿಗಿಲಾಗಿ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ ಜನಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು.
ಅವರದೇ ಪ್ರಭಾವದಲ್ಲಿ ಬೆಳೆದ ತಾವು ಸಹ ರಾಷ್ಟ್ರೀಯತೆಯ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡವರು.
ಕಾಂಗ್ರೆಸ್ ಪಕ್ಷದ ದೇಶ ವಿರೋಧಿ ದೋರಣೆಗಳನ್ನು ಸದಾ ಖಂಡಿಸುತ್ತಾ ಬಂದವರು. ಭಾರತೀಯ ಜನತಾ ಪಕ್ಷದ
ಮೂಲಕ ಅನೇಕ ಬಾರಿ ಶಾಸಕರಾಗಿ ಚುನಾಯಿತರಾಗಿದ್ದು ಮಾತ್ರವಲ್ಲದೇ ರಾಜ್ಯದ ಮುಖ್ಯಮಂತ್ರಿಯಾಗುವಷ್ಟು
ಎತ್ತರಕ್ಕೆ ಬೆಳೆದವರು.
ಪ್ರಸಕ್ತ ಸಂಧರ್ಭದಲ್ಲಿ ತಾಯಿಯಂತೆ ಕಾಪಾಡಿದ ಪಕ್ಷ ತೆಗೆದುಕೊಂಡ ನಿರ್ಣಯದ ವಿರುದ್ಧ ಅಸಮಾಧಾನಗೊಂಡಿರುವ ತಮ್ಮ ಮನಸ್ಥಿತಿ ನನಗೆ ಅರ್ಥವಾಗುತ್ತದೆ. ಆದರೆ, ಪಕ್ಷವನ್ನು ಬಿಟ್ಟು ನಂಬಿದ ಎಲ್ಲಾ
ಆದರ್ಶಗಳನ್ನು ತೊರೆದು ನಮ್ಮ ಪಕ್ಷದ ಚಿಂತನೆಗೆ ವಿರುದ್ಧವಾದ ಕಾಂಗ್ರೇಸ್ ಪಕ್ಷಕ್ಕೆ ತಾವು ಸೇರಲು
ಬಯಸಿರುವುದು ಮಾತ್ರ ಅತ್ಯಂತ ದುರದೃಷ್ಟಕರ.
ಮುಂದೆ ಒಂದು ದಿನ ತಾವು ಕಾಂಗ್ರೇಸ್ ಪಕ್ಷದಿಂದ ಗೆದ್ದು ಬಂದ ಸಂಧರ್ಭದಲ್ಲಿ ಸದನದಲ್ಲಿ ಗೋ ಹತ್ಯೆ ಪರ -ವಿರೋಧದ ಚರ್ಚೆ ನಡೆದರೆ ತಾವು ಗೋ ಹತ್ಯೆಯನ್ನು ಸಮರ್ಥಿಸಲು ಸಾಧ್ಯವೇ? ಉಗ್ರ PFI ಸಂಘಟನೆ ಕುರಿತಾದ ಪರ-ವಿರೋಧದ ಚರ್ಚೆಯಲ್ಲಿ PFI ನಿರ್ಬಂಧ ತೆರವು ಮಾಡಲು ತಾವು ಸಮ್ಮತ್ತಿಸಲು ಸಾಧ್ಯವೇ? ಹುಬ್ಬಳ್ಳಿಯ ಈದ್ದಾ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸಲು ವಿರೋಧ ವ್ಯಕ್ತ ಪಡಿಸಿದ ಕಾಂಗ್ರೇಸ್ ಪಕ್ಷದ ವಿರುದ್ಧ ತಮ್ಮ ಉಗ್ರ ಹೋರಾಟ ನನಗಿನ್ನೂ ಮನಸ್ಸಿನಲ್ಲಿ ಹಸಿರಾಗಿದೆ. ಈಗ ತಾವು ಅದೇ ಪಕ್ಷವನ್ನು ಯಾವ ರೀತಿ ಒಪ್ಪಿಕೊಳ್ಳಲು ಸಾಧ್ಯ? ನಾವು ನಂಬಿ ಪ್ರತಿಪಾದಿಸುತ್ತಾ ಬಂದಿರುವ ಎಲ್ಲಾ ತತ್ವ, ಆದರ್ಶಗಳ ವಿರುದ್ಧ ಕೆಲಸ ಮಾಡುವ
ಕಾಂಗ್ರೆಸ್ ಪಕ್ಷದೊಂದಿಗೆ ಕೆಲಸ ಮಾಡುವುದು ಹೇಗೆ ಸಾಧ್ಯ? ಈ ಕುರಿತು ಒಮ್ಮೆ ಯೋಚಿಸಿ ಎಂದು ಕೋರುತ್ತೇನೆ.
ಕೇವಲ ಈ ಬಾರಿಯ ಚುನಾವಣೆಯಲ್ಲಿ ತಮಗೆ ಸ್ಪರ್ಧಿಸಲು ಬಿಜೆಪಿ ಅವಕಾಶ ನೀಡಲಿಲ್ಲವೆಂಬ ಕಾರಣವನ್ನು
ಮುಂದಿಟ್ಟುಕೊಂಡು ಪಕ್ಷ ತೊರೆಯುವ ಮಹತ್ವದ ನಿರ್ಧಾರ ಮಾಡುವ ಮುನ್ನ ಪಕ್ಷ ತಮಗೆ ಈ ಹಿಂದೆ ನೀಡಿದ
ಸ್ಥಾನ-ಮಾನಗಳ ಕುರಿತು ಒಮ್ಮೆ ಅವಲೋಕಿಸಬೇಕೆಂದು ಕೋರುತ್ತೇನೆ.
ಯಾವುದೇ ವ್ಯಕ್ತಿ ರಾಜಕೀಯವಾಗಿ ಎತ್ತರಕ್ಕೆ ಬೆಳೆಯಲು ಸಾಧ್ಯವಾದರೆ ಅದು ಆತ ನಂಬಿರುವ ಪಕ್ಷದ ತತ್ವ,
ಸಿದ್ಧಾಂತಗಳು ಹಾಗು ಪಕ್ಷಕ್ಕಾಗಿ ರಾತ್ರಿ ಹಗಲೆನ್ನದೆ ದುಡಿಯುವ ಕಾರ್ಯಕರ್ತರ ಬೆಂಬಲದಿಂದ ಮಾತ್ರ ಎಂಬುದನ್ನು ತಾವು ಮರೆಯಬಾರದು. ತಮ್ಮ ಈ ಪಕ್ಷ ವಿರೋಧಿ ನಿಲುವಿನಿಂದ ಅನೇಕ ಹಿರಿಯ ನಾಯಕರಿಗೆ, ಪಕ್ಷವನ್ನು ಪ್ರೀತಿಸುವ ಅಸಂಖ್ಯಾತ ಕಾರ್ಯಕರ್ತರ ಮನಸ್ಸಿಗೆ ಅಪಾರವಾದ ನೋವಾಗಿದೆ. ದುಡುಕಿನ ನಿರ್ಧಾರ ಮಾಡದೇ ಒಮ್ಮೆ ಈ ಕುರಿತು ಸಮಗ್ರವಾಗಿ ಯೋಚಿಸಿ, ಕಾಲ ಇನ್ನೂ ಮಿಂಚಿಲ್ಲ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv