Breaking News

ಆಹಾರ ಕಲಬೆರಕೆ ಅಕ್ರಮದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಡಾ.ಸೆಲ್ವಮಣಿ

Cnewstv.in / 19.10.2022/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಆಹಾರ ಕಲಬೆರಕೆ ಅಕ್ರಮದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಡಾ.ಸೆಲ್ವಮಣಿ

ಶಿವಮೊಗ್ಗ : ಜಿಲ್ಲೆಯಲ್ಲಿ ಆಹಾರ ಕಲಬೆರಕೆ ಪ್ರಕರಣಗಳನ್ನು ಪತ್ತೆ ಹಚ್ಚಲು ನಿರಂತರ ದಾಳಿಗಳನ್ನು ಮೊಕದ್ದಮೆ ದಾಖಲಿಸುವಂತೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಅಧಿಕಾರಿಗಳಿಗೆ ಸೂಚಿಸಿದರು. ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಗ್ರಾಹಕರ ರಕ್ಷಣಾ ಕೌನ್ಸಿಲ್ ಸಭೆಯಲ್ಲಿ ಮಾತನಾಡಿದರು.

ಆಹಾರ ಕಲಬೆರಕೆ ಪ್ರಕರಣಗಳ ಪತ್ತೆ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಬೇಕು. ಹಲವು ಮಾರಕ ಕಾಯಿಲೆಗಳಿಗೆ ಆಹಾರ ಕಲಬೆರಕೆ ಪ್ರಮುಖ ಕಾರಣವಾಗಿದೆ. ಯಾವುದೇ ಕಾರಣಕ್ಕೂ ಆಹಾರ ಕಲಬೆರಕೆ ಅಕ್ರಮಗಳನ್ನು ಸಹಿಸಲು ಸಾಧ್ಯವಿಲ್ಲ. ಹೊಟೇಲ್ ಹಾಗೂ ರಸ್ತೆ ಬದಿ ತಿಂಡಿ ತಿನಿಸು ಮಾರಾಟಗಾರರು ಕರಿದ ಎಣ್ಣೆಯನ್ನು ಮರು ಬಳಕೆ ಮಾಡದಂತೆ ಎಚ್ಚರಿಕೆ ನೀಡಬೇಕು. ಅಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು. ಆಹಾರ ಕಲಬೆರಕೆ ಪ್ರಕರಣಗಳಲ್ಲಿ ಮೊಕದ್ದಮೆಗಳನ್ನು ದಾಖಲಿಸಿ ಕಠಿಣ ಕ್ರಮ ಜರುಗಿಸುವಂತೆ ಅವರು ತಿಳಿಸಿದರು.

ಆಹಾರ ಕಲಬೆರಕೆ ತಡೆಗೆ ಕಠಿಣ ಕಾಯ್ದೆಗಳು ಜಾರಿಯಲ್ಲಿದ್ದು, ಅವುಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಬೇಕು. ತಪಾಸಣಾ ಕಾರ್ಯಕ್ಕಾಗಿ ಸ್ಥಳೀಯ ಸಂಸ್ಥೆಗಳ ನೆರವನ್ನು ಪಡೆದುಕೊಂಡು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ತಾಲೂಕು ಮಟ್ಟದಲ್ಲಿಯೂ ಪತ್ತೆ ಕಾರ್ಯ ನಡೆಸಿ ಪ್ರತಿ ತಿಂಗಳು ವರದಿ ನೀಡಲು ಅವರು ಸೂಚನೆ ನೀಡಿದರು.

ಪ್ಯಾಕೇಜ್ ಮಾಡಲಾದ ಆಹಾರ ತಿನಿಸುಗಳು ಸರ್ಕಾರದ ಮಾನದಂಡಗಳನ್ನು ಅನುಸರಿಸುತ್ತಿರುವುದನ್ನು ಖಾತ್ರಿಪಡಿಸಬೇಕು. ಕುಡಿಯುವ ನೀರಿಗೆ ಗರಿಷ್ಟ ಬೆಲೆಗಿಂತ ಹೆಚ್ಚಿನ ದರ ವಿಧಿಸುವ ಪ್ರಕರಣಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಬೇಕು. ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಈ ಕುರಿತು ತಪಾಸಣೆ ಕೈಗೊಳ್ಳುವಂತೆ ಅವರು ಸೂಚಿಸಿದರು.

ಇದರೊಂದಿಗೆ ಗ್ರಾಹಕರ ಹಕ್ಕುಗಳ ಕುರಿತು ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ, ಮಹಿಳಾ ಸಂಘಗಳಿಗೆ ಅರಿವು ಮೂಡಿಸುವ ಕಾರ್ಯವನ್ನು ವ್ಯಾಪಕವಾಗಿ ಕೈಗೊಳ್ಳಬೇಕು. ಪ್ರತಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ತಂಡಗಳನ್ನು ರಚಿಸಿ ಗ್ರಾಹಕ ಕಾಯ್ದೆ, ಹಕ್ಕುಗಳ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಬೇಕು. ಗ್ರಾಹಕ ಕಾಯ್ದೆ ಅನುಷ್ಟಾನ ಕುರಿತು ಸಮೀಕ್ಷೆ ಕಾರ್ಯಕ್ಕೆ ಈ ತಂಡಗಳನ್ನು ಬಳಸಿಕೊಳ್ಳಬಹುದಾಗಿದೆ ಎಂದರು.

ಅರ್ಜಿದಾರರು ಸರ್ಕಾರಿ ಇಲಾಖೆಗಳಿಗೆ, ಸಕಾಲ ಯೋಜನೆಯಡಿಯಲ್ಲಿ ಸೇವೆಯನ್ನು ನಮೂದಿಸದೇ ಅರ್ಜಿ ಸಲ್ಲಿಸಿದರೂ, ಅದನ್ನು ಕಡ್ಡಾಯವಾಗಿ ಸಕಾಲ ಯೋಜನೆಯಡಿ ಪರಿಗಣಿಸಿ ಕಾಲಮಿತಿಯ ಒಳಗಾಗಿ ಸೇವೆಯನ್ನು ಸಲ್ಲಿಸಬೇಕು ಎಂದು ಹೇಳಿದರು.

ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಅವಿನ್, ಜಿಲ್ಲಾ ಆಹಾರ ಸುರಕ್ಷಾ ಅಧಿಕಾರಿ ಡಾ.ಮಧು, ತಾಲೂಕು ಆಹಾರ ಸುರಕ್ಷಾ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ಇದನ್ನು ಓದಿ :

http://cnewstv.in/?p=11284

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*